ಶಿಯಾಳಿ ರಾಮಾಮೃತ ರಂಗನಾಥನ್ (ಜನನ ೧೨ ಆಗಸ್ಟ್ ೧೮೯೨) ಭಾರತೀಯ ಗಣಿತಜ್ಞ ಮತ್ತು ಗ್ರಂಥಪಾಲಕರಾಗಿದ್ದರು. ಅವರ ಗಮರ್ನಾಹ ಕೊಡುಗೆಗಳೆಂದರೆ ಗ್ರಂಥಾಲಯದ ಪಂಚಸೂತ್ರಗಳು ಮತ್ತು ಕೊಲೊನ್ ವರ್ಗೀಕರಣ. ಅವರನ್ನು ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಕರೆಯುತ್ತಾರೆ. ಇವರ ಜನ್ಮ ದಿನವನ್ನು ರಾಷ್ಟ್ರೀಯ ಗ್ರಂಥಪಾಲಕರ ದಿನವನ್ನಾಗಿ ಆಚರಿಸಲಾಗುತ್ತಿದೆ. == ಜನನ == ರಂಗನಾಥನ್ ರವರು ೯ ಆಗಸ್ಟ್ ೧೮೯೨ ತಮಿಳುನಾಡಿನ ತಂಜಾವೂರು ಜಿಲ್ಲೆಯ ಶಿಯಾಳಿಯಲ್ಲಿ ಜನಿಸಿದರು. ಶಿಯಾಳಿ ರಾಮಾಮೃತ ರಂಗನಾಥನ್ ಎಂಬುದು ಇವರ ಪೂರ್ಣ ಹೆಸರು. ತಂದೆ ರಾಮಾಮೃತ ಅಯ್ಯರ್, ತಾಯಿ ಸೀತಾಲಕ್ಷ್ಮಿ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು ಬಂಧುಗಳ ಆಶ್ರಯದಲ್ಲಿ ಬೆಳೆದರು. == ಆರಂಭಿಕ ಜೀವನ == ರಂಗನಾಥನ್ ರವರು ತಮ್ಮ ಆರಂಭಿಕ ವಿದ್ಯಾಭ್ಯಾಸವನ್ನು ಶಿಯಾಳಿಯ ಹಿಂದೂ ಪ್ರೌಢಶಾಲೆಯಲ್ಲಿ ಮಾಡಿದರು. 1909ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಮತ್ತು 1911ರಲ್ಲಿ ಇಂಟರ್‍ಮೀಡಿಯಟ್ ಪರೀಕ್ಷೆಯಲ್ಲೂ ಉತ್ತೀರ್ಣರಾದರು. ಅನಂತರ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದರು (1913). ಗಣಿತಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು ಮದ್ರಾಸ್‌ ವಿಶ್ವವಿದ್ಯಾನಿಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದರು (1916). 1917ರಲ್ಲಿ ಎಲ್.ಟಿ. ಪದವಿ ಪಡೆದು ವೃತ್ತಿಜೀವನ ಆರಂಭಿಸಿದರು. == ವೃತ್ತಿ ಜೀವನ == ಮೊದಲಿಗೆ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿ ನೇಮಕವಾದ ಇವರು 1920ರಲ್ಲಿ ಕೊಯಮತ್ತೂರಿನ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಗಿ ಸೇವೆ ಸಲ್ಲಿಸಿದರು. ಅನಂತರ 1921ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ 1924ರವರೆಗೆ ಸೇವೆ ಸಲ್ಲಿಸಿದರು. 1924ರಲ್ಲಿ ಮದರಾಸು ವಿಶ್ವವಿದ್ಯಾಲಯದ ಗ್ರಂಥಪಾಲಕರಾಗಿ ನೇಮಕವಾಗುವುದರ ಮೂಲಕ ರಂಗನಾಥರ ವೃತ್ತಿಜೀವನ ಹೊಸ ತಿರುವನ್ನು ಪಡೆದುಕೊಂಡಿತು. ಗ್ರಂಥಪಾಲಕರಾಗಿ ನೇಮಕರಾದ ಇವರಲ್ಲಿ ಗ್ರಂಥಗಳ ಜೋಡಣೆ ಮತ್ತು ವಿತರಣೆಯ ಬಗ್ಗೆ ಅಪಾರ ಆಸಕ್ತಿ ಇದ್ದುದನ್ನು ಗಮನಿಸಿದ ಮದ್ರಾಸು ವಿಶ್ವಿವಿದ್ಯಾಲಯ ಇವರನ್ನು ಗ್ರಂಥಾಲಯ ತರಬೇತಿಗಾಗಿ ಇಂಗ್ಲೆಂಡಿಗೆ ಕಳುಹಿಸಿ ಕೊಟ್ಟಿತು. 1924 ಸೆಪ್ಟೆಂಬರ್ 24ರಂದು ಇಂಗ್ಲೆಂಡಿನ ಲಂಡನ್ ಸ್ಕೂಲ್ ಆಫ್ ಲೈಬ್ರರಿಯನ್ ಎಂಬ ಶಿಕ್ಷಣ ಸಂಸ್ಥೆಯನ್ನು ಸೇರಿದರು. ಅಲ್ಲಿ ಬೋಧಕರಾಗಿದ್ದ ಬೆರ್‍ವಿಕ್‍ಸೇಯರ್ಸ್ ಎಂಬರ ಆಪ್ತ ಶಿಷ್ಯರಾಗಿ ಗ್ರಂಥಾಲಯ ವಿಜ್ಞಾನದ ಅಧ್ಯಯನ ಕೈಗೊಂಡರು. ಈ ಸಂದರ್ಭದಲ್ಲಿ ಇಂಗ್ಲೆಂಡಿನ ಅನೇಕ ಗ್ರಂಥಾಲಯಗಳಿಗೆ ಭೇಟಿ ನೀಡಿ ಆ ಗ್ರಂಥಾಲಯಗಳ ವ್ಯವಸ್ಥೆ, ಆಡಳಿತ, ಜೋಡಣೆ ಕ್ರಮ, ವಿತರಣೆ ವಿಧಾನ ಇತ್ಯಾದಿಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆದರು. ಇದರಿಂದಾಗಿ ಇವರಿಗೆ ಗ್ರಂಥಾಲಯಗಳ ಬಗ್ಗೆ ಒಂದು ಸಮಗ್ರ ಕಲ್ಪನೆ ದೊರೆಯುವಂತಾಯಿತು. ಗ್ರಂಥಾಲಯ ವಿಜ್ಞಾನದಲ್ಲಿ ಆನರ್ಸ್ ಡಿಪ್ಲೊಮ ಪದವಿ ಪಡೆದುಕೊಂಡರು. ಅನಂತರ ಮದ್ರಾಸಿಗೆ ಹಿಂದಿರುಗಿದ ಇವರು ಮದರಾಸು ವಿಶ್ವವಿದ್ಯಾಲಯದ ಗ್ರಂಥಾಲಯವನ್ನು ತಮ್ಮ ಪ್ರಯೋಗಶಾಲೆಯಾಗಿ ಮಾಡಿಕೊಂಡರು. 1931 ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ಡಿಪ್ಲೊಮ ತರಗತಿಗಳನ್ನು ಆರಂಭಿಸಿದರು. ಮದ್ರಾಸು ವಿಶ್ವವಿದ್ಯಾಯದ ಗ್ರಂಥಾಲಯದಲ್ಲಿ ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು 1945ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಗ್ರಂಥಾಲಯ ವಿಜ್ಞಾನದ ಮುಖ್ಯಸ್ಥ ಹುದ್ದೆಯನ್ನು ಸ್ವೀಕರಿಸಿ 1947ರ ವರೆಗೆ ಸೇವೆ ಸಲ್ಲಿಸಿದರು. == ಕೃತಿಗಳು == ಫೈವ್ ಲಾಸ್ ಆಫ್ ಲೈಬ್ರಿ ಸೈನ್ಸ್ (1931), ಮಾಡೆಲ್ ಲೈಬ್ರರಿ ಆಕ್ಟ್ (1931), ಕೋಲನ್ ಕ್ಲಾಸಿಫಿಕೇನ್ (1933), ಲೈಬ್ರರಿ ಅಡ್ಮಿನಿಸ್ಟ್ರೇಷನ್ (1935), ಥಿಯರಿ ಆಫ್ ಲೈಬ್ರರಿ ಕೆಟಲಾಗ್ (1938), ಬಿಬ್ಲಿಯಾಗ್ರಫಿ ಆಫ್ ರೆಫೆರೆನ್ ಬುಕ್ಸ್ ಅಂಡ್ ಬಿಬ್ಲಿಯಾಗ್ರಾಫಿಕ್ಸ್ (1941), ಮಾಡೆಲ್ ಪಬ್ಲಿಕ್ ಲೈಬ್ರರಿ (1941), ಸ್ಕೂಲ್ ಅಂಡ್ ಕಾಲೇಜ್‍ಲೈಬ್ರರೀಸ್ (1942), ಲೈಬ್ರರಿ ಕ್ಲಾಸಿಫಿಕೇಶನ್; ಫಂಡಾಮೆಂಟಲ್ ಅಂಡ್ ಪ್ರೊಸೀಜರ್ (1944), ಎಜುಕೇಷನ್ ಫಾರ್ ಲಿಶರ್ (1946), ನ್ಯಾಷನಲ್ ಲೈಬ್ರರಿ ಸಿಸ್ಟಮ್: ಎ ಪ್ಲಾನ್ ಫಾರ್ ಇಂಡಿಯ (1945), ನ್ಯಾಷನಲ್ ಲೈಬ್ರರಿ ಸಿಸ್ಟಮ್ : ಎ ಪ್ಲಾನ್ ಫಾರ್ ಇಂಡಿಯ (1948), ಲೈಬ್ರರಿ ಬುಕ್ ಸೆಲಕ್ಷನ್ (1952), ಯೂನಿವರ್ಸಿಟಿ ರಿಫಾರಂ ಇನ್ ಕಾಂಟೆಂಪೊರರಿ ಇಂಡಿಯ (1952), ಡಸ್ಕ್ರಿಪ್ಟಿವ್ ಅಕೌಂಟ್ ಆಫ್ ಕೋಲನ್ ಕ್ಲಾಸಿಫಿಕೇಶನ್ (1967), ಡಾಕುಮೆಂಟೇಶನ್ : ಜಿನೇಸಿಸ್ ಅಂಡ್ ಡೆವಲಪ್‍ಮೆಂಟ್ (1972), ಪಬ್ಲಿಕ್ ಲೈಬ್ರರಿ ಸಿಸ್ಟಮ್ : ಇಂಡಿಯ, ನೇಪಾಲ, ಶ್ರೀಲಂಕ, ಯು.ಕೆ., ಯುಎಸೆ (1972), ನ್ಯೂ ಎಜುಕೇಶನ್ ಅಂಡ್ ಸ್ಕೂಲ್ ಲೈಬ್ರರೀಸ್ (1973) - ಇವು ಇವರ ಕೆಲವು ಪ್ರಮುಖ ಕೃತಿಗಳು. == ಪ್ರಶಸ್ತಿಗಳು == ಗ್ರಂಥಾಲಯ ಮತ್ತು ಗ್ರಂಥಾಲಯ ವಿಜ್ಞಾನಕ್ಕೆ ನೀಡಿದ ಅಪೂರ್ವ ಸೇವೆಯನ್ನು ಪರಿಗಣಿಸಿ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿದೆ. ದೆಹಲಿ ವಿಶ್ವವಿದ್ಯಾಲಯ (1948), ಪಿಟ್ಸ್‍ಬರ್ಗ್ ವಿಶ್ವವಿದ್ಯಾಲಯ (1964) ಇವರಿಗೆ ಡಿ. ಲಿಟ್. ಪದವಿ ನೀಡಿದೆ. ಭಾರತ ಸರ್ಕಾರ 1957 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. 1970ರಲ್ಲಿ ಅಮೆರಿಕದ ಮಾರ್ಗರೇಟ್ ಮಾನ್ ಪಾರಿತೋಷಕಕ್ಕೆ ಇವರು ಭಾಜನರಾದರು. ಈ ಗೌರವ ಪಡೆದ ಪ್ರಥಮ ಭಾರತೀಯರಿವರು. ಗ್ರಂಥಾಲಯ ವಿಜ್ಞಾನಕ್ಕೆ ಹೊಸ ತತ್ತ್ವವನ್ನು ರೂಪಿಸಿ ಆಧುನಿಕ ಗ್ರಂಥಾಲಯ ವ್ಯವಸ್ಥೆಯನ್ನು ನಿರ್ಮಾಣ ಮಾಡಿದ ಇವರು 1972 ರಲ್ಲಿ ಮರಣ ಹೊಂದಿದರು. == ಉಲ್ಲೇ‍ಖಗಳು ==